Wednesday, June 21, 2017

ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು.

ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು.. FB ಯಲ್ಲಿನ ರಾಜೇಶ್ ಭಟ್ ರವರ ನಿಲುಮೆ.ಕೆಲವು ನನ್ನವೂ ಕೂಡ 

ಕಳೆದೆರಡು ದಿನಗಳಿಂದ ಅನೇಕ ಪೋಸ್ಟ್ಗಳನ್ನು ಓದಿದೆ. ಕೆಲವರು ರಾಷ್ರಪತಿಯನ್ನು ಭಾರತದ ಒಂದು ರಬ್ಬರ್ ಸ್ಟಾಂಪ್ ಎಂದೂ, ಕೆಲವರು ಪಪೆಟ್ ಅಧ್ಯಕ್ಷ ಎಂದೂ ಹೇಳಿದರು. ನಿಜ ಹೇಳಬೇಕಂದ್ರೆ ರಾಷ್ಟ್ರಪತಿಯವರು ತಮ್ಮ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಇದರಷ್ಟು ಪ್ರಬಲವಾದ ಸ್ಥಾನ ಭಾರತದಲ್ಲೇ ಇಲ್ಲ ಮತ್ತು ಯಾರಿಗೂ ಇಂತಹ ಗೌರವಾನ್ವಿತ ಸ್ಥಾನದ ಬಗ್ಗೆ ತುಚ್ಛವಾಗಿ ಮಾತನಾಡಲು ಧೈರ್ಯ ಕೂಡ ಇರುವುದಿಲ್ಲ.

ಯಾವುದೇ ಸರ್ಕಾರ ಮಸೂದೆಯನ್ನು , ಕಾನೂನನ್ನು ರಾಷ್ಟ್ರಪತಿಯವರ ಪರವಾನಗಿ ಇಲ್ಲದೆ ಜಾರಿಗೆ ತರಲು ಸಾಧ್ಯವಿಲ್ಲ.  ರಾಜ್ಯಪಾಲರು, ಉಪ ರಾಜ್ಯಪಾಲರು, ಚುನಾವಣಾಧಿಕಾರಿಗಳು ರಾಷ್ಟ್ರಪತಿಯವರ ಕೆಳಗೆ ನೇರ ಕೆಲಸ ಮಾಡುವ ಸಹೋದ್ಯೋಗಿಗಳಾಗಿರುತ್ತಾರೆ.  ದೆಹಲಿಯಲ್ಲಿ  ಲೆ‍ಫ್ಟೆನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ರವರು ಅಲ್ಲಿನ ಮುಖ್ಯಮಂತ್ರಿಗಳನ್ನು ಹೇಗೆ ನಿಭಾಯಿಸುತ್ತಿದ್ದರು ಅಂತ ನಮಗೆಲ್ಲರಿಗೂ ಗೊತ್ತು.   ಮುಖ್ಯ ಚುನಾವಣಾಧಿಕಾರಿಯಾಗಿದ್ದ ಟಿ. ಎನ್. ಶೇಷನ್ ರವರನ್ನು ಹೇಗೆ ಮರೆಯಲು ಸಾಧ್ಯ ?  ಭಾರತೀಯರಿಗೆ ಒಬ್ಬ ಚುನಾವಣಾಧಿಕಾರಿಗೆ ಇಷ್ಟೆಲ್ಲಾ ಅಧಿಕಾರಗಳಿವೆ ಎಂದು ತೋರಿಸಿಕೊಟ್ಟವರೇ ಅವರು, ಮತ್ತು ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ಹೇಗೆ ಕಟ್ಟು ನಿಟ್ಟಾಗಿ ನಡೆಸಬಹುದೆಂಬುದನ್ನು ತೋರಿಸಿಕೊಟ್ಟವರೇ ಅವರು.  ಭಾರತಿಯರಿಗೆ ಟಿ. ಎನ್. ಶೇಷನ್ ರವರೆ ರಾಷ್ಟ್ರಪತಿಯ ಹುದ್ದೆಯನ್ನು ಅಲಂಕರಿಸಬೇಕೆಂಬ ಆಸೆಯಿತ್ತು. ಆದರೆ ಹಾಗಾಗಲಿಲ್ಲ ಏಕೆ?  ಯಾವುದೇ ರಾಜಕೀಯ ಪಕ್ಷವೂ ಅವರನ್ನು ಬೆಂಬಲಿಸಲಿಲ್ಲ ಏಕೆಂದರೆ ಎಲ್ಲರಿಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಣಿಯುವ ಬೊಂಬೆ ಬೇಕಿತ್ತು, ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಗೋವಿನಂತವರು ಬೇಕಿತ್ತು. 

ರಾಷ್ಟ್ರಪತಿ ಹುದ್ದೆಗೆ ಸಾಮಾನ್ಯವಾಗಿ ಎಲ್ಲಾ ಪಕ್ಷಗಳು ರಾಜಕೀಯ ವೃತ್ತಿಜೀವನದ ಅಂತಿಮ ಘಟ್ಟದಲ್ಲಿರುವ ವ್ಯಕ್ತಿಗಳನ್ನು ಆರಿಸುತ್ತಾರೆ. ಇದು ಹೇಗೆಂದರೆ,  ಖಾಸಗಿ ಕಂಪನಿಗಳಲ್ಲಿ ನಿವೃತ್ತಿ ಆದ ನಂತರ ಒಬ್ಬ ಉದ್ಯೋಗಿಗೆ ಅವರ ಸೇವೆಯನ್ನು ಮುಂದುವರಿಸುವ ಅವಕಾಶವನ್ನು ಕಂಪನಿಯ ಆಡಳಿತ ವರ್ಗದವರು ಕರುಣಾದೃಷ್ಟಿಯಿಂದ ನೀಡುವ ರೀತಿ “ ಸರ್, ಮದುವೆಗೆ ಬಂದ ಮಗಳಿದ್ದಾಳೆ, ನನ್ನ ಮಗನ ಓದು ಇನ್ನೂ ಬಾಕಿ ಇದೆ, ನನ್ನ ಮಕ್ಕಳು ಇನ್ನೂ ತಮ್ಮ ಕಾಲ ಮೇಲೆ ನಿಂತಿಲ್ಲ, ದಯವಿಟ್ಟು ನನಗೆ ಕೆಲಸ ಮಾಡಲು ಇನ್ನೂ ಒಂದೆರಡು ವರ್ಷಗಳು ಅವಕಾಶ ಕೊಡಿ, ನಾ ನಿಮ್ಮ ಮಾತನ್ನ ಮೀರುವುದಿಲ್ಲಎಂದು ಘೋಗರೆದು ಒಬ್ಬ ಕಾರ್ಮಿಕ ಹುದ್ದೆಯನ್ನು ಉಳಿಸಿಕೊಂಡಂತಿರುತ್ತದೆ.  ಈ ರೀತಿಯಾಗಿ ಆಯ್ಕೆಗೊಂಡವರು ತಮ್ಮ ಅಧಿಕಾರವನ್ನು ಎಂದೂ ಸರಿಯಾಗಿ ಉಪಯೋಗಿಸುವುದಿಲ್ಲ ಮತ್ತು ರಾಜಕೀಯದವರ ಮನಸ್ಥಿತಿಯಿಂದಾಗಿ ಇಂತಹ ನಮ್ಮ ಹೆಮ್ಮೆಯ ಸೇನೆಯ ಮಹಾದಂಡನಾಯಕರಾದಂತಹ, ಪ್ರಬಲವಾದ, ಗೌರವಾನ್ವಿತ ಹುದ್ದೆಗಳನ್ನು ಒಂದು ಶೋಚನೀಯ ಮತ್ತು ಕಳಪೆ ಸ್ಥಿತಿಗೆ ತಂದಿಟ್ಟಿದ್ದಾರೆ.

ಕೆಲವರು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳ ಬಗ್ಗೆ ದಲಿತರ ಪರ / ವಿರೋಧದ ಬಗ್ಗೆ  ಮಾತನಾಡುತ್ತಿದ್ದಾರೆ.  ನನಗೆ ಅರ್ಥವಾಗದಂತಹ ವಿಷವೇನೆಂದರೆ ನಾವು ಪ್ರತಿಯೊಂದರಲ್ಲೂ ಜಾತಿಯನ್ನು / ಧರ್ಮವನ್ನು ಏಕೆ ತುರುಕುತ್ತಿದ್ದೇವೆ ಎಂದು.  ರಾಮನಾಥ್ ಕೋವಿಂದ್ ರವರು ರಾಮನಾಥ್  ಭಟ್ / ತಿವಾರಿ/ ಶಾಸ್ತ್ರೀ / ಹುಸೇನ್  ಆಗಿದ್ದರೆ ಏನು ಅಥವಾ ಆಗಿಲ್ಲದಿದ್ದರೆ ಏನು ವ್ಯತ್ಯಾಸವಾಗುತ್ತೆ ನಮಗೆ ? ಕೆಲಸ ಮುಖ್ಯವಲ್ಲವೇ ? ಕಾರ್ಯನಿರ್ವಹಿಸುವ ರೀತಿ ಮುಖ್ಯವಲ್ಲವೇ?  ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಜನಮಾನಸದಲ್ಲಿ ಇನ್ನೂ  ಮತ್ತು ಮುಂದಿನ ಜನಾಂಗಕ್ಕೂ ನಿಸ್ಸಂದೇಹವಾಗಿ ಪ್ರಿಯರಾಗಿ ಏಕಿರುತ್ತಾರೆ? ಏಕೆಂದರೆ ಅವರು ಎಲ್ಲಕ್ಕಿಂತ ಮೊದಲು ಭಾರತೀಯರಾಗಿದ್ದರು, ಭಾರತದ ಬಗ್ಗೆಯೇ ಮಾತನಾಡುತ್ತಿದ್ದರು, ಅವರ ಪ್ರತೀ ಮಾತಿನಲ್ಲೂ ಭಾರತದ ಅಭಿವೃದ್ಧಿಯ ಬಗ್ಗೆಯೇ ಉತ್ತೇಜನ ತುಂಬಿರುತ್ತಿತ್ತು.  ಪಾಕಿಸ್ತಾನ ಭಾರತವನ್ನು ಯಾವುದೇ ಪಂದ್ಯದಲ್ಲಿ ಸೋಲಿಸಿದಾಗ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸುವ ಕೆಲವೇ ಕೆಲವರು ಈ ದೇಶದಲ್ಲಿ ಇದ್ದರೂ ನಮಗೆ ಕಲಾಂ ತಾತನಂತವರು ಎಂದೆಂದಿಗೂ ಪ್ರಿಯರಾಗಿರುತ್ತಾರೆ.  ಕಾಶ್ಮೀರದಲ್ಲಿ ಮತ್ತು ಗಡಿಯಲ್ಲಿರುವ ನಮ್ಮ ಸೈನಿಕ ಸಹೋದರರಲ್ಲಿ ಹಲವರು ಮುಸ್ಲೀಮರೇ ಆಗಿದ್ದಾರೆ.

ಎಲ್ಲದರಲ್ಲೂ ಜಾತಿ, ಮತ, ಮೇಲು ಕೀಳು ಎನ್ನುವ ಕಸ ಪೇರಿಸಿ ಗುಡ್ಡ ಮಾಡುವಲ್ಲಿ ನಾವು ಎಲ್ಲರೂ ಸಮಾನವಾಗಿ ಭಾಗಿಯಾಗಿದ್ದೇವೆ.
ರಾಷ್ಟ್ರಪತಿಯಾಗಿ ಯಾವ ಜಾತಿಯವರೇ ಆಗಲಿ, ಧರ್ಮದವರೇ ಆಗಲಿ ಒಬ್ಬ ಭಾರತೀಯನಿರಲಿ, ಈ ಹುದ್ದೆಗೆ ನಿಜವಾದ ಘನತೆ ತರುವಂತವರು ಆಯ್ಕೆಯಾಗಲಿ.       

No comments: