Monday, July 11, 2016

ನಾ ಓದಿದ ಪುಸ್ತಕ - ಹೇಳಿ ಹೋಗು ಕಾರಣ - ರವಿ ಬೆಳಗೆರೆ

ನನಗೇಕಿಷ್ಟ ರವಿ ಬೆಳಗೆರೆ ? ಅವರು ಬರೆಯುವ ಶೈಲಿಯೇ ಹಾಗಿದೆ. ಅವರ ಕಥೆಯನ್ನು ಕಟ್ಟುವ ರೀತಿಯೇ ಹಾಗಿದೆ.

“ಒಂದು ಮುನಿಸಿಕೊಂಡಿರುವ ಕನಸು ಹುಡುಕಿಕೊಂಡು ಬಂದಿದೀನಿ. ನಿಮಗೇನಾದರೂ ಅದು ಇದಿರಾದರೆ, ನಾನಿಲ್ಲಿ ಕಾಯ್ತಿದೀನಿ ಅಂತ ತಿಳಿಸಿಬಿಡಿ. ಬೈದಿಬೈ – ಕನಸಿನ ಹೆಸರು ಪ್ರಾರ್ಥನಾ ?”

“ಹೇಳಿ ಹೋಗು ಕಾರಣ” ಓದಿದೆ. ಓದಿ ಮುಗಿಸಿದ ಮೇಲೆ ಬಾಯಾರಿದವನಿಗೆ ನೀರಿನ ಬದಲು ತುಸು ಶೇಂದಿ ಬೆರೆತ ಎಳೆನೀರು ಕುಡಿದಷ್ಟು ಸಂತೃಪ್ತಿ.

ಕಥೆಯು ಕೆಲವು ಕಡೆ ಕುತೂಹಲ ತಿರುವುಗಳನ್ನು ಪಡೆಯುತ್ತದೆ. ಕೆಲವೊಮ್ಮೆ ಕಥಾನಾಯಕ ಹಿಮವಂತ್ ಖಳನಾಯಕನಾಗಿ ಬದಲಾಗಿ ಹೋದನೇ ಎಂದು ಭಾಸವಾಗುತ್ತದೆ.  ಮನಸ್ಸಿದ್ದರೆ ಮಾರ್ಗ ಎನ್ನುವ ಸಂದೇಶವನ್ನು ಈ ಕಥೆ ಸಾರುತ್ತದೆ.

ಕೆಲವು ಕಡೆ ಸ್ವಗತದಲ್ಲಿ ಮತ್ತೆ ಮತ್ತೆ ಹಳೆಯ ಸಾಲುಗಳು ಪುನರಾವರ್ತನೆಯಾಗಿವೆ, ಬಹುಶಃ ಇದು ಧಾರಾವಾಹಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ಓದುಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶ ಇರಬಹುದು.

ಎಷ್ಟೇ ಹತ್ತಿರವಿದ್ದರೂ ದೈಹಿಕ ಸುಖ ಪಡೆಯದೇ ಒಬ್ಬ ವ್ಯಕ್ತಿ ತನ್ನವಳನ್ನು ಎಷ್ಟೊಂದು ಗಾಡವಾಗಿ ಪ್ರೀತಿಸಬಹುದು ಎನ್ನವ ಅನುಭವ ನಮ್ಮದಾಗುತ್ತದೆ. ಹಲವಾರು ಘಟನೆಗಳು, ಮಾತುಕತೆಗಳು ನಮ್ಮ ಜೀವನದಲ್ಲಿ ನಡೆಯುತ್ತಿರುತ್ತವೆ, ಅವುಗಳಲ್ಲಿ ಕೆಲವು ಅಕ್ಷರ ರೂಪದಲ್ಲಿ ಇಲ್ಲಿ ಮೂಡಿ ಬಂದಿವೆ. 

Thursday, June 2, 2016

ಅಬಚೂರಿನ ಪೋಸ್ಟಾಫೀಸು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ


“ ನೂರೆಂಟು ಅರ್ಥದಲ್ಲಿ ಜೂರಾರು ಜನ ಉಪಯೋಗಿಸಿರುವ ಮಾತಿನಲ್ಲಿ ನನಗೆ ಏನನ್ನಿಸುತ್ತಿದೆಯೋ ಅದನ್ನು ನಾನು ಹೇಳಲಾರೆ ಎಂದೆನ್ನಿಸಿತು“  ಇದು ತೇಜಸ್ವಿಯವರ ಕಥೆಗಳಲ್ಲಿ ಬರುವ ಪರಿಣಾಮಕಾರಿ ಮಾತುಗಳಲ್ಲೊಂದು.

ಕಥೆ ಬರೆಯಬೇಕೆ? ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆಗಳನ್ನು ಓದಿ. ಅಬಚೂರಿನ ಪೋಸ್ಟಾಫೀಸು , ಕಥಾಸಂಕಲನವನ್ನು ಓದಿದ ನಂತರ ನನಗೆ ಹೊಳೆದ ಅನಿಸಿಕೆ ಇದು,  
ತೇಜಸ್ವಿಯವರು ಸಣ್ಣಕಥೆಗಳು ಎಷ್ಟು ಅಚ್ಚುಕಟ್ಟಾಗಿವೆಯೆಂದರೆ ಅವುಗಳಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಸನ್ನಿವೇ಼ಶಗಳು, ವಾತಾವರಣಗಳು ನೈಜತೆಯಿಂದ ಕೂಡಿರುತ್ತದೆ. ಎಂದೂ ಕೋಪಗೊಳ್ಳದಿದ್ದವನು ಕಡೆಗೆ ಕೋಪದಿಂದ ಕೆಂಡವಾಗುವ ಪೋಸ್ಟಮಾಸ್ತರ ಬೋಬಣ್ಣ ;  ಅವನತಿ ಕಥೆಯ ಸೂರಾಚಾರಿ, ಗೌರಿ , ನಮ್ಮ ನಿಮ್ಮ ನಡುವೆ ಕಾಣುವ ಕೆಲವು ಜನರಂತೆ ದೊಡ್ಡ ಹುಡುಗನಾಗಿದ್ದರೂ ಇನ್ನೂ ಬುದ್ದಿಯಲ್ಲಿ ಮಾಗದ ವಿಶ್ವನಾಥ ; ಕುಬಿ ಮತ್ತು ಇಯಾಲ ಕಥೆಯಲ್ಲಿ ಡಾಕ್ಟರ್ ಕುಬಿ, ಇಯಾಲ ಪಾತ್ರಗಳ ಜೊತೆಗೆ ತನ್ನದೇ ಮಹತ್ವವನ್ನು ಹೊಂದಿರುವ ರಸ್ತೆಯಲ್ಲಿರುವ ಬಂಡೆ. ತುಕ್ಕೋಜಿ ಕಥೆಯಲ್ಲಿ ಹೇಗೆ ಒಂದು ಹಳ್ಳಿ ನಾಗರೀಕತೆಯ ವಿಕಾಸದ ಹೆಸರಿನಲ್ಲಿ ತನ್ನತನವನ್ನು ಕಳೆದುಕೊಂಡು ಪಟ್ಟಣವಾಗಿ ಮಾರ್ಪಡುತ್ತದೆ ಎಂಬುವುದನ್ನು ಮನದಟ್ಟು ಮಾಡುತ್ತಾರೆ ಹಾಗೆಯೇ ಅವಿವಾಹಿತ ಟೈಲರ್ ತುಕ್ಕೋಜಿಯ, ವಿವಾಹದ ನಂತರ ಮತ್ತು ಮಗುವಾದ ನಂತರದ ಅನುಭವಗಳು, ಅವನ ಉನ್ನತಿ , ಅವನತಿ,ಅವನ ಒತ್ತಡ, ಆತಂಕ  ಕಣ್ಣಿಗೆ ಕಟ್ಟುವಂತಿದೆ

ಡೇರ್ ಡೆವಿಲ್ ಮುಸ್ತಫಾ ಕಧೆಯಲ್ಲಿ ಮುಸ್ತಫಾನ ಕೈಚಳಕ, ಸಾಹಸಗಳು , ರಾಮಾನುಜನ ಜೊತೆ ನಡೆಯುವ ತಮಾಷೆ ರಂಜಿಸುತ್ತವೆ. ಕಥೆಯ ಕೊನೆಯಲ್ಲಿ ಲೇಖಕರು ಹೇಳುವ “ಆದರೆ ನಾವೆಲ್ಲ ಆಗಲೇ ಯೌವನದ ಹುಮ್ಮಸ್ಸಿನಲ್ಲಿ ಆ ಗಡಿಗಳೆನ್ನೆಲ್ಲಾ ಮೀರುತ್ತಾ ಬಹುದೂರ ಬಂದಿದ್ದೆವು” ಎನ್ನುವ ಮಾತು ಓದುಗರನ್ನೂ ಪ್ರಬುದ್ಧರನ್ನಾಗಿ ಮಾಡುತ್ತದೆ

ತಬರನ ಕಥೆ ಸ್ವಾತ್ರಂತ್ರ್ಯೋತ್ತರದ ಆಡಳಿತ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.


ತ್ಯಕ್ತ ಕಥೆಯಲ್ಲಿ ಕಥಾನಾಯಕನಷ್ಟೇ ಮುಖ್ಯವಾಗುವ ಕಿಟ್ಟಿ ಎನ್ನುವ ಹುಡುಗನ ಚೇಷ್ಟೆ, ಭಾವನೆ, ತಳಮಳಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತವೆ.