Wednesday, November 26, 2025

Book ʼಚುಕ್ಕಿʼ ಕವನ ಸಂಕಲನ Chukki - Poetry Collection by Vijayalakshmi Satyamurthy

 


“ಕೊಂಬೆಯ ಮೇಲೆ

ಮಳೆಯಲ್ಲಿ ನೆನೆಯುತ್ತ
ಮುದುಡಿ ಕೂತಿದೆ ಹಕ್ಕಿಯೊಂದು
ಅನಿಸಿತು ನನಗೆ
ನನ್ನ ಕಷ್ಟ ಏನೇನೂ ಅಲ್ಲ ಎಂದು”

ಇದು ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ʼಚುಕ್ಕಿʼ ಕವನ ಸಂಕಲನದ ಉತ್ತಮ ಪದ್ಯಗಳಲ್ಲಿ ಒಂದು.

===
ಮಾಯಗಾರ ನೀನೆಂದು
ಗೊತ್ತಿರಲಿಲ್ಲ
ನೀನು ಬಂದ ಮೇಲೆ

ಕಣ್ಣು ನಿಶ್ಚಲ ಕೊಳವಾಗಿದೆ
ಹೃದಯ ಮೆಲುಕು ಹಾಕಲು
ಕಲಿತಿದೆ
===

'ಇದ್ದರೆ ಇರಬೇಕು
ಸೂರ್ಯ ಚಂದ್ರರಂತೆ

ಜಗದ ಮಾತಿಗೆ ಕಿವಿಗೊಡದೆ
ಮೌನವಾಗಿ ಬೆಳಕ ಚೆಲ್ಲುತ್ತಾ '

ಎನ್ನುವ ಚೆನ್ನುಡಿಯನ್ನೂ ಒಳಗೊಂಡಿದೆ

ಬಿದ್ದಿರುವ ವಸ್ತುಗಳ
ಜೋಡಿಸುವ
ಮನಸಿಲ್ಲ ಇಂದು ನನಗೆ

ಜೋಡಿಸಲು ಕಾದಿರುವೆ
ಮಾತಿಗೆ ಮಾತು ನಿನ್ನ ಜೊತೆಗೆ


ಸರಳವಾದ ಮೂರು ನಾಲ್ಕು ಸಾಲುಗಳ 84 ಹನಿಗವನಗಳಲ್ಲಿ ಭಾವೋತ್ಕರ್ಷ, ಮನದಿಂಗಿತ, ತತ್ವ ಎಲ್ಲವೂ ಅಡಗಿವೆ. ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುವುದು ಮತ್ತು ತನ್ನ ಪ್ರಿಯರಾದವರೊಡನೆ ಹೇಳುವ ಮಾತುಗಳು ಇಲ್ಲಿ ಕವನಗಳ ರೂಪ ಪಡೆದುಕೊಂಡಿವೆ.


ʼಚುಕ್ಕಿʼ ಪುಸ್ತಕ ಚೆನ್ನಾಗಿದೆ

Book - "ತೆನೆ" ಕವನ ಸಂಕಲನ - ಶ್ರೀ ಅನಂತ ರಮೇಶ್. Tene Poetry collection by Anantha Ramesh

 




“ದಾರವಷ್ಟೆ ಕಾಣುವ 
ಈ ಹೂ ಮಾಲೆ 
ದೇವರಿಗೆ ಜನಿವಾರವೇನೇ?”
ಮಡದಿ ದಬಾಯಿಸುವುದರಲ್ಲಿ ಜಾಣೆ

"ತೆನೆ"

ಕವಿ, ಕಥೆಗಾರ ಮತ್ತು ಸಾಹಿತ್ಯಾಸಕ್ತರಾದ ಶ್ರೀ ಅನಂತ ರಮೇಶ್ ಅವರ ʼಹನಿಗವನ-ಕಿರುಗವನ ಬಣವೆʼ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಕವನ ಸಂಕಲನ ʼತೆನೆʼ. ಇದರಲ್ಲಿ ನೂರಾ ತೊಂಬತ್ತೊಂದಕ್ಕೂ ಹೆಚ್ಚು ಹನಿಗವನ ಮತ್ತು ಕಿರುಗವನಗಳಿವೆ.

ಪ್ರೇಮ, ರಾಜಕೀಯ, ನಿತ್ಯ ಬದುಕಿನ ಆಗುಹೋಗುಗಳನ್ನು, ಸಮಾಜದ ಓರೆಕೋರೆಗಳನ್ನು ತಮ್ಮ ʼಪನ್ʼ ದೃಷ್ಟಿಯಿಂದ ವೀಕ್ಷಿಸಿ ಹನಿಗವನದ ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಗಾಂಧಿ, ಕಲಾಂ, ವಾಜಪೇಯಿ, ಅಡಿಗರು, ನಾರಾಯಣಮೂರ್ತಿ, ವಿಶ್ವೇಶ್ವರಯ್ಯನವರ ಬಗ್ಗೆ ವಿರಚಿತ ಕಿರುಗವನಗಳು ಅನಂತ ಸರ್ ಶೈಲಿಯಲ್ಲಿ ಸೊಗಸಾಗಿವೆ.

ಮೊದಲು ಬಿಡದಿಯಲ್ಲಿದ್ದು ಈಗ ತಮ್ಮದೇ ದೇಶದಲ್ಲಿರುವ ಸ್ವಾಮಿಯ ಬಗ್ಗೆ ಬರೆದಿರುವ ʼಚೆಲ್ಲುʼ ಎನ್ನುವ ಹನಿಗವನವು ಕವಿಯು ಹೇಗೆ ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಾರೆಂಬುದಕ್ಕೆ ಸಾಕ್ಷಿಯಾಗಿದೆ:

ಬಿಡದಿ ಬುಡದಿ ಪ್ರಬುದ್ಧ
ಬಡಬಡಿಕೆಯೂ ಶುದ್ಧ!
ನಿತ್ಯ ಹಾಸ್ಯ ರಸಾಯನ
ಬಿಡಸುತ್ತಲೆ ಚೆಲ್ಲು ಜೀವನ!

ತಮ್ಮನ್ನು ಬಿಕರಿಗಿಟ್ಟುಕೊಂಡ ಸ್ವಯಂ ಗುರುಗಳ ಬಗ್ಗೆ ಬರೆದ ಕವನ ʼಆಶೀರ್ವಾದ ಮೊತ್ತʼ -

ಆ ದೊಡ್ಡ ಸ್ವಾಮೀಜಿಗಳ
ಆಶೀರ್ವಾದ ಪಡೆದಿದ್ದೇನೆ
ನಂಬಿಕೆಯಾಗದಿದ್ದರೆ
ತೋರಿಸುತ್ತೇನೆ ನಿಮಗೆ
ಹತ್ತು ಸಾವಿರ ರೂಪಾಯಿ
ರಸೀತಿ ಪಾವತಿಸಿದ್ದಕ್ಕೆ !?

ಸಂಸಾರಸ್ಥನಾಗಿ ಬಡ್ತಿ ಹೊಂದಿದವನ ಸಾಲುಗಳು “ಮೊದಲು – ನಂತರ” ಕವನದಲ್ಲಿ ಹೀಗಿದೆ -

ಮೊದಲ ಭೇಟಿಗಳಲ್ಲಿ
ನೀನು ಉಸುರಿದ ಆಸೆಗಳು
ಹೃದಯ ಸೇರಿ ಭದ್ರವಾದವು

ನಿನ್ನ ಈಗಿನ ಆಸೆಗಳು
ಹೃದಯ ಹತ್ತಿರದ ಕಿಸೆಗೂ
ನುಸುಳಿ ಖರ್ಚಿನ ರೂಪವಾದವು

ನನಗಿಷ್ಟವಾದ ಒಂದು ಹೃದಯಸ್ಪರ್ಶಿ ಹನಿಗವನ -

ಬೇಸಿಗೆಯ ಬಿರು ಬಿಸಿಲಿಗೆ
“ಬಾಡಿದ” ಹೂಗಳ ಯಾರೋ
ಚರ್ಚಿಸದೆ ಚೌಕಾಶಿಸದೆ ಕೊಂಡರು
ಮಾರುವವಳು “ಅರಳಿದಳು”

ಹೀಗೆ ಹಲವಾರು ಕವನಗಳು ಮನಸ್ಸಿಗೆ ತಾಗುತ್ತವೆ.




ಓದುಗರಿಗೆ ಅನುಕೂಲವಾಗಲೆಂದೇ ಸಂಕಲನದಲ್ಲಿ ಕವನಗಳನ್ನು ಕವನ-ಹನಿಗವನ, ತುಂತುರು, ಮಾಯೆ, ವಸಂತನ ಹಕ್ಕಿಗಳು, ಹೂ ಹಾಡು, ಆಗು ಹೋಗು, ಗಟ್ಟಿ ಕಾಲು ಮತ್ತು ಕಿರು ವಿಚಾರ ಎಂದು ಎಂಟು ಅಧ್ಯಯಗಳನ್ನಾಗಿ ವರ್ಗೀಕರಿಸಿದ್ದಾರೆ.


ಇದು ಕನ್ನಡ ಕವನಸಂಕಲನಗಳ ಸಂಕುಲಕ್ಕೆ ಮತ್ತೊಂದು ಉತ್ತಮ ಸೇರ್ಪಡೆಯಾಗಿದೆ.